ಅಧ್ಯಾಯ 4


ಸೈತಾನನ ಪ್ರಲೋಭನೆಗಳು
(ಮತ್ತಾಯ ೪:೧-೧೧; ಮಾರ್ಕ ೧:೧೨-೧೩)

1ಯೇಸುವು ಪವಿತ್ರಾತ್ಮಭರಿತರಾಗಿ ಜೋರ್ಡನ್‌ ನದಿ ತೀರದಿಂದ ಹಿಂತಿರುಗಿದ ಮೇಲೆ ಅದೇ ಆತ್ಮರಿಂದ ಪ್ರೇರಿತರಾಗಿ ಬೆಂಗಾಡು ಪ್ರದೇಶಕ್ಕೆ ಬಂದರು. 2ನಲ್ವತ್ತು ದಿನ ಅಲ್ಲಿದ್ದಾಗ ಅವರನ್ನು ಪರೀಕ್ಷಿಸಲು ಪಿಶಾಚಿಯು ಪ್ರಯತ್ನಿಸಿತು. ಅಷ್ಟು ದಿನಗಳೂ ಏನನ್ನೂ ತಿನ್ನದೆ ಉಪವಾಸವಿದ್ದ ಯೇಸುವಿಗೆ ಆಗ ಹಸಿವಾಯಿತು.
3ಆಗ ಪಿಶಾಚಿಯು, “ನೀನು ದೇವರ ಪುತ್ರನೆಂಬುದು ಸತ್ಯವಾದರೆ ಈ ಕಲ್ಲಿಗೆ ರೊಟ್ಟಿಯಾಗೆಂದು ಆಜ್ಞೆಮಾಡು,” ಎಂದಿತು. 4ಅದಕ್ಕೆ ಯೇಸುವು, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ, ‘ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ,’” ಎಂದು ಉತ್ತರಿಸಿದರು.
5ಬಳಿಕ ಯೇಸುವನ್ನು ಎತ್ತರಕ್ಕೆ ಕರೆದೊಯ್ದು ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕ್ಷಣ ಮಾತ್ರದಲ್ಲಿ ತೋರಿಸಿ, 6ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುವೆನು. ಇವೆಲ್ಲಾ ನನ್ನ ಅಧೀನದಲ್ಲಿವೆ. 7ನೀನು ನನಗೆ ಅಡ್ಡಬಿದ್ದೆಯಾದರೆ ಇದೆಲ್ಲಾ ನಿನ್ನದಾಗುವುದು,” ಎಂದಿತು. 8ಅದಕ್ಕೆ  ಯೇಸು ಪ್ರತ್ಯುತ್ತರವಾಗಿ, “ ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು; ಅವರೊಬ್ಬರಿಗೆ ಸೇವೆ ಸಲ್ಲಿಸು,’ ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ,” ಎಂದರು.
9ಅನಂತರ ಪಿಶಾಚಿ ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುತ್ತತುದಿಯ ಮೇಲೆ ನಿಲ್ಲಿಸಿ, “ನೀನು ದೇವರ ಪುತ್ರನೆಂಬುದು ಸತ್ಯವಾದರೆ ಇಲ್ಲಿಂದ ಕೆಳಕ್ಕೆ ಧುಮುಕು. 10ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನಿನ್ನನ್ನು ಕಾಪಾಡುವಂತೆ ದೇವರೇ ತನ್ನ ದೂತರಿಗೆ ಆಜ್ಞಾಪಿಸುವರು, ಮತ್ತು 11’ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಗದಂತೆ ನಿನ್ನನ್ನು ತಮ್ಮ ಕೈಗಳಲ್ಲಿ ಆತುಕೊಳ್ಳುವರು,’ “ ಎಂದಿತು. 12ಅದಕ್ಕೆ ಯೇಸು, “ ‘ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು,’ ಎಂದೂ ಪವಿತ್ರಗ್ರಂಥ ಹೇಳುತ್ತದೆ,” ಎಂದು ಉತ್ತರಕೊಟ್ಟರು. 13ಹೀಗೆ ಪಿಶಾಚಿ ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ ತಕ್ಕ ಕಾಲ ಬರುವ ತನಕ ಅವರನ್ನು ಬಿಟ್ಟುಹೋಯಿತು.

ಗಲಿಲೇಯದಲ್ಲಿ ಬೋಧನೆ
(ಮತ್ತಾಯ ೪:೧೨-೧೭; ಮಾರ್ಕ ೧:೧೪-೧೫)

          14ಯೇಸುವು ಪವಿತ್ರಾತ್ಮರ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿ ಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. 15ಅಲ್ಲಿನ ಪ್ರಾರ್ಥನಾಮಂದಿರಗಳಲ್ಲಿ ಅವರು ಬೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ!

ಸ್ವಗ್ರಾಮದಲ್ಲಿ ಸನ್ಮಾನವಿಲ್ಲ
(ಮತ್ತಾಯ ೧೩:೫೪-೫೮; ಮಾರ್ಕ ೬:೧-೬)

16ಯೇಸುವು ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್‌ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, 17ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು:
                                      18ದೇವರಾತ್ಮವು ನನ್ನ ಮೇಲಿದೆ
                                                ದೀನದಲಿತರಿಗೆ ಶುಭಸಂದೇಶವ ಬೋಧಿಸಲೆಂದು
                                                ಅವರೆನ್ನನು ಅಭಿಷೇಕಿಸಿದ್ದಾರೆ
                                      ಬಂಧಿತರಿಗೆ ಬಿಡುಗಡೆಯನ್ನು
                                                ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲು
                                                ದಬ್ಬಾಳಿಕೆಗೀಡಾದವರಿಗೆ ಸ್ವಾತಂತ್ರ್ಯ ನೀಡಲೂ
                                      19ದೇವರು ತಮ್ಮ ಜನತೆಯನ್ನು ಉದ್ದರಿಸುವ
                                                ಕಾಲ ಬಂತೆಂದು ಸಾರಲೂ
                                               ನನ್ನನ್ನವರು ಕಳುಹಿಸಿದ್ದಾರೆ,”
20ಈ ವಾಕ್ಯವನ್ನು ಓದಿ ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. 21ಆಗ ಯೇಸುವು, “ನೀವು ಈ ಪವಿತ್ರವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು,” ಎಂದು ವಿವರಿಸಲಾರಂಭಿಸಿದರು. 22ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. “ಇವನು ಜೋಸೆಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. 23ಅನಂತರ ಯೇಸು ಅವರಿಗೆ, “‘ವೈದ್ಯನೇ ಮೊದಲು ನಿನ್ನನ್ನು ನೀನು ಗುಣಪಡಿಸಿಕೋ,’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ; ಅಲ್ಲದೆ, ‘ಕಫೆರ್ನವುಮಿನಲ್ಲಿ ನೀನು ಎಂತೆಂತಹ ಮಹಾತ್ಕಾರ್ಯಗಳನ್ನು ಮಾಡಿದೆಯೆಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು,’ ಎಂದು ಹೇಳುವಿರಿ. 24ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. 25ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೇ ದೇಶದಲ್ಲೆಲ್ಲಾ ಮಹಾಕ್ಷಾಮ ಬಂದೊದಗಿತು. ಆಗ ಇಸ್ರಯೇಲ್‌ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. 26ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸಲಿಲ್ಲ. ಸಿದೋನ್‌ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದರು. 27ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್‌ ನಾಡಿನಲ್ಲಿ ಅನೇಕ ಕುಷ್ಟರೋಗಿಗಳಿದ್ದರು. ಅವರಲ್ಲಿ ಸಿರಿಯ ದೇಶದ ನಾಮನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ,” ಎಂದು ಹೇಳಿದರು.
28ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿದ್ದ ಎಲ್ಲರೂ ಕಡುಕೋಪಗೊಂಡರು. 29ಯೇಸುವನ್ನು ಊರಹೊರಕ್ಕೆ ಎಳೆದುಕೊಂಡು ತಮ್ಮ ಊರಿನ ಗುಡ್ಡದ ತುದಿಗೆ ಕೊಂಡೊಯ್ದು ಅಲ್ಲಿಂದ ಅವರನ್ನು ಕೆಳಕ್ಕೆ ತಳ್ಳಬೇಕೆಂದಿದ್ದರು. 30ಆದರೆ ಯೇಸುವು ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

ಕಫೆರ್ನವುಮಿನಲ್ಲಿ ಬೋಧನೆ-ದೆವ್ವಗಳ ಉಚ್ಚಾಟನೆ
(ಮಾರ್ಕ ೧:೨೧-೨೮)

31ಬಳಿಕ ಯೇಸುವು ಗಲಿಲೇಯ ಪ್ರಾಂತದ ಕಫೆರ್ನವುಮ್‌ ಎಂಬ ಊರಿಗೆ ಬಂದು ಸಬ್ಬತ್‌ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು. 32ಅವರು ಅಧಿಕಾರ ವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು. 33ದುಷ್ಟ ದೆವ್ವ ಹಿಡಿದವನೊಬ್ಬನು ಆ ಪ್ರಾರ್ಥನಾಮಂದಿರದಲ್ಲಿ ಇದ್ದನು. 34ಅವನು, “ಓ ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನಮಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಗಟ್ಟಿಯಾಗಿ ಕಿರುಚಿದನು. 35ಆದರೆ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ದೆವ್ವಕ್ಕೆ ಆಜ್ಞಾಪಿಸಿದರು. ದೆವ್ವವು ಎಲ್ಲರ ಎದುರು ಅವನನ್ನು ಕೆಡವಿ, ಯಾವ ಕೆಡುಕನ್ನೂ ಮಾಡದೇ ಅವನನ್ನು ಬಿಟ್ಟುಹೋಯಿತು. 36ಜನರೆಲ್ಲರೂ ಆಶ್ಚರ್ಯಚಕಿತರಾದರು. “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞೆ ಮಾಡುತ್ತಾನೆ. ಅವು ಈತ ಹೇಳಿದ ಹಾಗೆ ಕೇಳುತ್ತವಲ್ಲಾ!” ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. 37ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.
ಪೇತ್ರನ ಅತ್ತೆಗೆ ಜ್ವರ ನಿವಾರಣೆ
(ಮತ್ತಾಯ ೮:೧೪-೧೫; ಮಾರ್ಕ ೧:೨೯-೩೧)

38ಪ್ರಾರ್ಥನಾಮಂದಿರದಿಂದ ಹೊರಟ ಯೇಸುವು ಸಿಮೋನನ ಮನೆಗೆ ಬಂದರು. ಸಿಮೋನನ ಅತ್ತೆ ವಿಷಮಶೀತ ಜ್ವರದಿಂದ ನರಳುತ್ತಿದ್ದರು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. 39ಯೇಸು ಆಕೆಯ ಬಳಿ ನಿಂತು ಬಾಗಿ, ಜ್ವರಕ್ಕೆ ಬಿಟ್ಟು ಹೋಗಬೇಕೆಂದು ಆಜ್ಞಾಪಿಸಿದರು; ಅದು ಬಿಟ್ಟುಹೋಯಿತು. ಆ ಕ್ಷಣವೇ ಆಕೆ ಎದ್ದು ಅವೆರೆಲ್ಲರನ್ನೂ ಸತ್ಕರಿಸಿದಳು.

ರೋಗಿಗಳಿಗೆ ಆರೋಗ್ಯದಾನ
(ಮತ್ತಾಯ ೮:೧೬-೧೭; ಮಾರ್ಕ ೧:೩೨-೩೪)  

40ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಗಳಲ್ಲಿ ವಿಧವಿಧವಾಧ ಕಾಯಿಲೆಗಳಿಂದ ನರಳುತ್ತಿದ್ದವರನೆಲ್ಲಾ ಯೇಸುವಿನ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೂ ತಮ್ಮ ಕೈಯನ್ನಿರಿಸಿ ಗುಣಪಡಿಸಿದರು. 41ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀವು ದೇವರಪುತ್ರ,” ಎಂದು ಕಿರುಚುತ್ತಾ ಬಿಟ್ಟುಹೋದವು. ಇವರೇ ‘ಕ್ರಿಸ್ತ’ ಎಂದು ಅವರಿಗೆ ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ.

ಜುದೇಯ ಪ್ರಾಂತದಲ್ಲಿ ಬೋಧನೆ
(ಮಾರ್ಕ ೧:೩೫-೩೯) 

42ಬೆಳಗಾಗುತ್ತಲೇ ಯೇಸುವು ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟು ಹೋಗಬಾರದೆಂದು ಅವರನ್ನು ತಡೆಯಲು ಯತ್ನಿಸಿದರು. 43ಅವರಿಗೆ ಯೇಸು, “ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,” ಎಂದರು. 44ಬಳಿಕ ಜುದೇಯ ಪ್ರಾಂತದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸಿದರು.

_____________________________________________________________
*ಪೊಂತಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ