ಅಧ್ಯಾಯ 3


ಸ್ನಾನಿಕ ಯೊವಾನ್ನನ ಬೋಧನೆ
(ಮತ್ತಾಯ ೩:೧-೧೨; ಮಾರ್ಕ ೧:೧-೮; ಯೊವಾನ್ನ ೧:೧೯-೨೮)

1ಅದು ತಿಬೇರಿಯಸ್‌ ಚಕ್ರವರ್ತಿಯ ಆಡಳಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತಕ್ಕೆ ಪೊನ್ಸೆಯುಸ್‌* ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತಕ್ಕೆ ಹೆರೋದನೂ, ಇತುರೆಯ ಮತ್ತು ತ್ರಕೋನಿತಿ ಪ್ರಾಂತಗಳಿಗೆ ಅವನ ತಮ್ಮನಾದ ಫಿಲಿಪ್ಪನೂ ಮತ್ತು ಅಭಿಲೇನೆ ಪ್ರಾಂತಕ್ಕೆ ಲುಸಾನಿಯನೂ ಸಾಮಂತರಾಗಿದ್ದರು. 2ಆನ್ನನೂ ಮತ್ತು ಕಾಯಫನೂ ಅಂದಿನ ಪ್ರಧಾನಯಾಜಕರು. ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋಧೆಯಾಯಿತು. 3ಆತನು ಜೋರ್ಡನ್‌ ನದಿಯ ಪರಿಸರ ಪ್ರಾಂತದಲ್ಲೆಲ್ಲಾ ಸಂಚರಿಸುತ್ತಾ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಸಾರಿ ಹೇಳುತ್ತಿದ್ದನು. 4ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ:
                                      “ ‘ಸಿದ್ಧಪಡಿಸಿರಿ ಪ್ರಭುವಿಗಾಗಿ ಮಾರ್ಗವನ್ನು,
                                                ನೇರಗೊಳಿಸಿರಿ ಅವರಾಗಮನಕ್ಕೆ ಹಾದಿಯನು’
                                                ಎಂದು ಬೆಂಗಾಡಿನಲಿ ಘೋಷಿಸುವನೋರ್ವನು.
                                      5ಭರ್ತಿಯಾಗಬೇಕು ಎಲ್ಲ ಹಳ್ಳಕೊಳ್ಳಗಳು;
                                                ಮಟ್ಟವಾಗಬೇಕು ಬೆಟ್ಟಗುಡ್ಡಗಳು;
                                                ನೇರವಾಗಬೇಕು ಅಂಕುಡೊಂಕುಗಳು;
                                                ಹಸನಾಗಬೇಕು ತಗ್ಗುಮುಗ್ಗಾದ ಹಾದಿಗಳು;
                                      6ಕಾಣ್ವರು ಆಗ ಎಲ್ಲ ಮಾನವರು
                                                ದೇವಕೃಪೆಯ ಜೀವೋದ್ಧಾರವನು”
7ಯೊವಾನ್ನನ ಬಳಿಗೆ ಸ್ನಾನದೀಕ್ಷೆ ಪಡೆಯಲು ಜನರು ಗುಂಪುಗುಂಪಾಗಿ ಬರುತ್ತಿದ್ದರು. ಆತನು ಅವರಿಗೆ, “ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು? 8ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ. ‘ಅಬ್ರಹಾಮನೇ ನಮ್ಮ ಪಿತಾಮಹ,’ ಎಂದು ನಿಮ್ಮನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ; ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತಿಯಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ. 9ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು,” ಎಂದನು.
10ಆಗ ಜನಸಮೂಹವು, “ಹಾಗಾದರೆ ನಾವೇನು ಮಾಡಬೇಕು?” ಎಂದು ಕೇಳಲು, 11ನಿಮಗೆ ಎರಡು ಅಂಗಿಗಳಿದ್ದರೆ, ಒಂದನ್ನು ಏನೂ ಇಲ್ಲದವನಿಗೆ ಕೊಡಿ; ಅಂತೆಯೇ ಆಹಾರವುಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,” ಎಂದು ಉತ್ತರಕೊಟ್ಟನು. 12ಅನಂತರ ಸುಂಕದವರು ಸಹ ಸ್ನಾನದೀಕ್ಷೆ ಪಡೆಯಲು ಬಂದು, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದಾಗ, 13ಗೊತ್ತುಮಾಡಿರುವುದಕ್ಕಿಂತ ಹೆಚ್ಚಾಗಿ ಕಿತ್ತುಕೊಳ್ಳಬೇಡಿ,” ಎಂದನು. 14“ನಾವು ಮಾಡಬೇಕಾದುದೇನು?” ಎಂದು ಸಿಪಾಯಿಗಳು  ಬಂದು ಪ್ರಶ್ನಿಸಿದಾಗ, “ಬಲಾತ್ಕಾರದಿಂದಾಗಲಿ, ಸುಳ್ಳು ಬೆದರಿಕೆಯಿಂದಾಗಲಿ ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ,” ಎಂದು ಆತನು ಉತ್ತರವಿತ್ತನು.
15ಈ ಯೊವಾನ್ನನೇ ಎಲ್ಲರೂ ಎದುರು ನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಧಾರಕ ಆಗಿರಬಹುದೇ ಎಂದು ಜನರು ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. 16ಅದಕ್ಕೆ ಉತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ; ಅವರು ನಿಮಗೆ ಪವಿತ್ರಾತ್ಮರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು. 17ಅವರ ಕೈಯಲ್ಲಿ ಮೊರವಿದೆ. ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ, ಗಟ್ಟಿಕಾಳನ್ನು ಮಾತ್ರ ಕಣಜಕ್ಕೆ ತುಂಬುವರು. ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟು ಹಾಕುವರು,” ಎಂದು ನುಡಿದನು. 18ಹೀಗೆ ಯೊವಾನ್ನನು ಪ್ರಬೋಧಿಸುತ್ತಾ, ಜನರಿಗೆ ಶುಭಸಂದೇಶವನ್ನು ಸಾರುತ್ತಾ ಇದ್ದನು.
19ಸಾಮಂತ ಹೆರೋದನು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದನು. ಅಲ್ಲದೆ ತನ್ನ ಸೋದರನ ಹೆಂಡತಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಆದ್ದರಿಂದ ಯೊವಾನ್ನನು ಅವನನ್ನು ಖಂಡಿಸಿದ್ದನು. 20ಹೆರೋದನು ಯೊವಾನ್ನನನ್ನು ಕಾರಾಗೃಹದಲ್ಲಿ ಬಂಧಿಸಿ ತನ್ನ ದುಷ್ಕೃತ್ಯಗಳಿಗೆ ಮತ್ತೊಂದು ದುಷ್ಕೃತ್ಯವನ್ನು ಕೂಡಿಸಿದ್ದನು.

ಯೇಸು ಪಡೆದ ದೀಕ್ಷಾಸ್ನಾನ
(ಮತ್ತಾಯ ೩:೧೩-೧೭; ಮಾರ್ಕ ೧:೯-೧೧; ಯೊವಾನ್ನ ೧:೩೨-೩೪)

21ಜನರೆಲ್ಲರೂ ಸ್ನಾನದೀಕ್ಷೆ ಪಡೆಯುತ್ತಿದ್ದರು. ಯೇಸುವು ಬಂದು ದೀಕ್ಷಾಸ್ನಾನ ಪಡೆದು ಪ್ರಾರ್ಥಿಸುತ್ತಿರಲು, ಆಕಾಶವು ತೆರೆಯಿತು. 22ಆಗ ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು. ಅಲ್ಲದೆ, “ನೀನೇ ನನ್ನ ಪುತ್ರನು; ನನಗೆ ಪರಮ ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂಬ ದೈವವಾಣಿ ಕೇಳಿಸಿತು.


ಯೇಸುವಿನ ವಂಶಾವಳಿ
(ಮತ್ತಾಯ ೧:೧-೧೭)

23ಯೇಸುವು ಬೋಧಿಸಲು ಪ್ರಾರಂಭಿಸಿದಾಗ ಅವರಿಗೆ ಸುಮಾರು ಮೂವತ್ತು ವರ್ಷ ವಯಸ್ಸು. ಯೇಸು ಜೋಸೆಫನ ಮಗನೆಂದು ಜನರು ಭಾವಿಸಿದ್ದರು.
ಜೋಸೆಫನು ಹೇಲಿಯನಿಗೆ ಹುಟ್ಟಿದನು.
24ಹೇಲಿಯನು ಮತ್ತಾತನಿಗೆ, ಮತ್ತಾತನು ಲೇವಿಗೆ, ಲೇವಿ ಮಲ್ಕೀಯನಿಗೆ, ಮಲ್ಕಿ ಯನ್ನಾಯನಿಗೆ, ಯನ್ನಾಯ ಜೋಸೆಫನಿಗೆ ಹುಟ್ಟಿದನು.
25ಜೋಸೆಫ್‌ ಮತ್ತಥೀಯನಿಗೆ, ನತ್ತಥೀಯ ಆಮೋಸನಿಗೆ, ಆಮೋಸನು ನಾಹೂಮನಿಗೆ, ನಾಹೂಮ ಎಸ್ಲೀಯನಿಗೆ, ಎಸ್ಲೀಯ ನಗ್ಗಾಯನಿಗೆ ಹುಟ್ಟಿದರು.
26ನಗ್ಗಾಯ ಮಹಾಥನಿಗೆ, ಮಹಾಥ ಮತ್ತಥೀಯನಿಗೆ, ಮತ್ತಥೀಯಶಿಮಿಯಾನಿಗೆ, ಶಿಮಿಯಾ ಯೋಸೇಖನಿಗೆ ಹುಟ್ಟಿದರು.
27ಯೋಸೇಖ ಯೋದನಿಗೆ, ಯೋದನು ಯೊವಾನ್ನನಿಗೆ, ಯೊವಾನ್ನನು ರೇಸನಿಗೆ, ರೇಸನು ಜೆರುಬಾಬಲನಿಗೆ, ಜೆರುಬಾಬಲನು ಸಲಥಿಯೇಲನಿಗೆ, ಸಲಥಿಯೇಲನು ಸೇರಿಯನಿಗೆ ಹುಟ್ಟಿದರು.
28ಸೇರಿಯನು ಮೆಲ್ಕೀಯನಿಗೆ, ಮೆಲ್ಕೀಯನು ಅದ್ದಿಯನಿಗೆ, ಅದ್ದಿಯನು ಕೋಸಾಮನಿಗೆ, ಕೋಸಾಮನು ಎಲ್ಮದಾಮನಿಗೆ, ಎಲ್ಮದಾಮನು ಏರನಿಗೆ ಹುಟ್ಟಿದರು.
29ಏರ್‌ ಯಹೋಷುವನಿಗೆ, ಯಹೋಷುವನು ಎಲಿಯೇಜರನಿಗೆ, ಎಲಿಯೇಜರನು ಯೋರೈಮನಿಗೆ, ಯೋರೈಮನು ಮತ್ತಾತನಿಗೆ, ಮತ್ತಾತನು ಲೇವಿಗೆ ಹುಟ್ಟಿದರು.
30ಲೇವಿಯು ಸಿಮಿಯೋನನಿಗೆ, ಸಿಮಿಯೋನನು ಯೂದನಿಗೆ, ಯೂದನು ಜೋಸೆಫನಿಗೆ, ಜೋಸೆಫನು ಯೊನಾಮನಿಗೆ, ಯೊನಾಮನು ಎಲಿಯಕೀಮನಿಗೆ ಹುಟ್ಟದರು.
31ಎಲಿಯಕೀಮನು ಮೆಲಯಾನಿಗೆ, ಮೆಲೆಯಾನು ಮೆನ್ನನಿಗೆ, ಮೆನ್ನನು ಮತ್ತಾಥನಿಗೆ, ಮತ್ತಾಥನು ನಾತಾನನಿಗೆ, ನಾತಾನನು ದಾವೀದನಿಗೆ ಹುಟ್ಟಿದರು.
32ದಾವೀದ್‌ ಇಶಾಯನಿಗೆ, ಇಶಾಯನು ಓಬೇದನಿಗೆ, ಓಬೇದನು ಬೋವಜನಿಗೆ, ಬೋವಜನು ಸಲ್ಮೋನನಿಗೆ, ಸಲ್ಮೋನನು ನಹಸ್ಸೋನನಿಗೆ ಹುಟ್ಟದರು.
33ನಹಸ್ಸೋನನು ಅಮ್ಮಿನದಾಮನಿಗೆ, ಅಮ್ಮಿನದಾಮನು ಅದ್ಮಿನನಿಗೆ, ಅದ್ಮಿನನು ಅರ್ನೈಯನಿಗೆ, ಅರ್ನೈಯನು ಹೆಸ್ರೋನನಿಗೆ, ಹೆಸ್ರೋನನು ಪೆರಸನಿಗೆ, ಪೆರಸನು ಯೂದನಿಗೆ ಹುಟ್ಟಿದರು.
34ಯೂದನು ಯಕೋಬನಿಗೆ, ಯಕೋಬನು ಇಸಾಕನಿಗೆ, ಇಸಾಕನು ಅಬ್ರಹಾಮನಿಗೆ, ಅಬ್ರಹಾಮನು ತೇರನಿಗೆ, ತೇರನು ನಹೋರನಿಗೆ ಹುಟ್ಟಿದರು.
35ನಹೋರನು ಸೆರೂಗನಿಗೆ, ಸೆರೂಗನು ರೆಗೂವನಿಗೆ, ರೆಗೂವನು ಪೆಲೆಗನಿಗೆ, ಪೆಲೆಗನು ಎಬರನಿಗೆ, ಎಬರ್‌ ಸಾಲನಿಗೆ ಹುಟ್ಟಿದರು.
36ಸಾಲನು ಕಯೀನನಿಗೆ, ಕಯೀನನು ಅರ್ಫಕ್ಷಾದನಿಗೆ, ಅರ್ಫಕ್ಷಾದನು ಶೇಮನಿಗೆ, ಶೇಮನು ನೋವನಿಗೆ, ನೋವನು ಲಾಮೆಕನಿಗೆ, ಲಾಮೆಕನು ಮತೂಷಲನಿಗೆ ಹುಟ್ಟಿದರು.
37ಮತೂಷಲನು  , ಹನೋಕನು ಯೆರೆದನಿಗೆ, ಯೆರೆದನು ಮಹಲಲೇಲನಿಗೆ, ಮಹಲಲೇಲನು ಕಯಿನನಿಗೆ ಹುಟ್ಟಿದರು.

38ಕಯಿನನು ಎನೋಷನಿಗೆ, ಎನೋಷನು ಸೇಥನಿಗೆ, ಸೇಥನು ಅದಾಮನಿಗೆ ಹುಟ್ಟಿದರು. ಅದಾಮನು ದೇವರ ಮಗನು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ