ಅಧ್ಯಾಯ 22



ಯೇಸುವಿನ ಕೊಲೆಗೆ ಒಳಸಂಚು
(ಮತ್ತಾಯ ೨೬:೧-೫; ಮಾರ್ಕ ೧೪:೧-೨; ಯೊವಾನ್ನ ೧೧:೪೫-೫೩)

1ಪಾಸ್ಕಮಹೋತ್ಸವವು ಸಮೀಪಿಸುತ್ತಿತ್ತು. ಅದು ಹುಳಿರಹಿತ ರೊಟ್ಟಿಯನ್ನು ಭುಜಿಸುವ ಹಬ್ಬ. 2ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಯೇಸುವನ್ನು ಕೊಲ್ಲಿಸಲು ಅಲೋಚನೆ ಮಾಡುತ್ತಿದ್ದರು; ಜನರ ಭಯ ಅವರಿಗಿದ್ದುದರಿಂದ ಅದಕ್ಕೆ ಗುಟ್ಟಾದ ಮಾರ್ಗವನ್ನು ಹುಡುಕುತ್ತಿದ್ದರು.
3ಅಷ್ಟರಲ್ಲಿ ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕಾರಿಯೋತಿನ ಯೂದನು ಸೈತಾನನಿಗೆ ವಶನಾದನು. 4ಆ ಯೂದನು ಮುಖ್ಯಯಾಜಕರ ಬಳಿಗೆ ಹಾಗೂ ಮಹಾದೇವಾಲಯದ ಪಹರೆಯ ದಳಪತಿಗಳ ಬಳಿಗೆ ಹೋಗಿ, ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಸಮಾಲೋಚಿಸಿದನು. 5ಇದರಿಂದ ಅವರಿಗೆ ಅತ್ಯಾನಂದವಾಯಿತು. ಅವರು ಹಣಕೊಡುವುದಾಗಿ ವಾಗ್ದಾನ ಮಾಡಿದರು. 6ಅವನೂ ಸಮ್ಮತಿಸಿ, ಜನಜಂಗುಳಿಯಿಲ್ಲದ ಸಂದರ್ಭದಲ್ಲಿ ಯೇಸುವನ್ನು ಹಿಡಿದೊಪ್ಪಿಸಲು ಸಮಯ ಕಾಯುತ್ತಿದ್ದನು.
                                                                                                                                                                                                                                                                                                                       
ಹಬ್ಬದೂಟಕ್ಕೆ ಸಿದ್ಧತೆ
(ಮತ್ತಾಯ ೨೬:೧೭-೨೫; ಮಾರ್ಕ ೧೪:೧೨-೨೧; ಯೊವಾನ್ನ ೧೩:೨೧-೩೦)

7ಹುಳಿರಹಿತ ರೊಟ್ಟಿಯ ಹಬ್ಬವು ಪ್ರಾರಂಭವಾಯಿತು. ಪಾಸ್ಕ ಕುರಿಮರಿಯನ್ನು ಕೊಲ್ಲುವ ದಿನವು ಬಂದಿತು. 8ಆದುದರಿಂದ ಯೇಸು ತಮ್ಮ ಶಿಷ್ಯರಾದ ಪೇತ್ರ ಹಾಗೂ ಯೊವಾನ್ನರನ್ನು ಕರೆದು, "ಹೋಗಿ, ಪಾಸ್ಕ ಭೋಜನವನ್ನು ಸಿದ್ಧಮಾಡಿರಿ," ಎಂದರು. 9"ಎಲ್ಲಿ ಸಿದ್ಧಪಡಿಸಬೇಕು?" ಎಂದು ಅವರು ಕೇಳಿದಾಗ, 10"ನೀವು ಪಟ್ಟಣವನ್ನು ಪ್ರವೇಶಿಸುವಾಗ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬನನ್ನು ಎದುರುಗೊಳ್ಳುವಿರಿ. ಅವನನ್ನು ಹಿಂಬಾಲಿಸಿ, ಅವನು ಹೋಗುವ ಮನೆಗೆ ಹೋಗಿರಿ. 11ಆ ಮನೆಯ ಯಜಮಾನನಿಗೆ, 'ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕಭೋಜನ ಮಾಡಲು ಕೊಠಡಿ ಎಲ್ಲಿ?, ಎಂದು ನಿಮ್ಮನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾರೆ, ಎನ್ನಿರಿ. 12ಅವನು ಮೇಲ್ಮಾಳಿಗೆಯಲ್ಲಿ ವಿಶಾಲವಾದ ಹಾಗೂ ಸುಸಜ್ಜಿತ ಕೊಠಡಿಯೊಂದನ್ನು ತೋರಿಸುವನು. ಅಲ್ಲಿ ಸಿದ್ಧಮಾಡಿರಿ," ಎಂದರು. 13ಅಂತೆಯೇ ಅವರಿಬ್ಬರೂ ಹೋಗಿ ಯೇಸು ತಮಗೆ ಹೇಳಿದ ಪ್ರಕಾರ ಎಲ್ಲವೂ ವ್ಯವಸ್ಥಿತವಾಗಿರುವುದನ್ನು ಕಂಡು ಪಾಸ್ಕಭೋಜನವನ್ನು ತಯಾರಿಸಿದರು.

ಪ್ರಭುವಿನ ಭೋಜನ
(ಮತ್ತಾಯ ೨೬:೨೬-೩೦; ಮಾರ್ಕ ೧೪:೨೨-೨೬)

14ನಿಶ್ಚಿತ ಸಮಯ ಬಂದಾಗ ಯೇಸು ಶಿಷ್ಯರ ಸಮೇತ ಊಟಕ್ಕೆ ಕುಳಿತರು. 15ಆಗ ಅವರು ಶಿಷ್ಯರಿಗೆ, "ನಾನು ಯಾತನೆಯನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಡನೆ ಈ ಪಾಸ್ಕಭೋಜನವನ್ನು ಮಾಡಲು ಬಹಳ ಅಪೇಕ್ಷೆಯಿಂದ ಎದುರು ನೋಡುತ್ತಿದ್ದೆನು. 16ದೇವರ ಸಾಮ್ರಾಜ್ಯದಲ್ಲಿ ಇದು ಪೂರ್ಣಾರ್ಥವನ್ನು ಪಡೆಯುವ ತನಕ ನಾನಿದನ್ನು ಭುಜಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ," ಎಂದರು. 17ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, "ಇದನ್ನು ತೆಗೆದುಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ; ದೇವರ ಸಾಮ್ರಾಜ್ಯವು ಬರುವ ತನಕ 18ಇನ್ನು ನಾನು ಈ ದ್ರಾಕ್ಷಾರಸವನ್ನು ಕುಡಿಯುವುದಿಲ್ಲವೆಂದು ನಿಮಗೆ ಹೇಳುತ್ತೇನೆ," ಎಂದರು. 19ಬಳಿಕ ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು ಶಿಷ್ಯರಿಗೆ ಕೊಡುತ್ತಾ, "ಇದು [ನಿಮಗಾಗಿ ಒಪ್ಪಿಸಲಾಗುವ] ನನ್ನ ಶರೀರ, [ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ]" ಎಂದರು. 20[ಅಂತೆಯೇ, ಊಟವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆಯು ನಿಮಗಾಗಿ ಸುರಿಸಲಾಗುವ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ"].
21"ಆದರೆ ಇದೋ, ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. 22ನರಪುತ್ರನೇನೋ ದೈವೇಚ್ಚೆಯ ಪ್ರಕಾರ ಹೊರಟುಹೋಗುತ್ತಾನೆ; ಆದರೆ ಅವನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ!" ಎಂದರು. 23ಇದನ್ನು ಕೇಳಿದ ಶಿಷ್ಯರು ಇಂಥ ದುಷ್ಕೃತ್ಯ ಮಾಡುವವನು ತಮ್ಮಲ್ಲಿ ಯಾರಿರಬಹುದು ಎಂದು ಒಬ್ಬರನ್ನೊಬ್ಬರು ವಿಚಾರಿಸಿತೊಡಗಿದರು. 
                                                                                                                                                                                                                                                                                               
ನಾಯಕನು ಸೇವಕನಾಗಲಿ

24ತಮ್ಮಲ್ಲಿ ಅತಿಶ್ರೇಷ್ಟನು ಯಾರು ಎಂಬ ವಾದವಿವಾದವು ಶಿಷ್ಯರಲ್ಲಿ ಎದ್ದಿತು. 25ಆಗ ಯೇಸು, "ಲೌಕಿಕ ರಾಜರು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆ; ಅಧಿಕಾರ ನಡೆಸುವವರು ಧರ್ಮಿಷ್ಟರೆನಿಸಿಕೊಳ್ಳುತ್ತಾರೆ. 26ಆದರೆ ನೀವು ಹಾಗಾಗಬಾರದು; ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು. 27ಈ ಇಬ್ಬರಲ್ಲಿ ದೊಡ್ಡವನು ಯಾರು? ಊಟ ಮಾಡುವವನೋ? ಊಟ ಬಡಿಸುವವನೋ? ಖಂಡಿತವಾಗಿ ಊಟ ಮಾಡವವನು. ಆದರೂ ಊಟ ಬಡಿಸುವ ಊಳಿಗದವನಂತೆ ನಾನು ನಿಮ್ಮ ನಡುವೆ ಇದ್ದೇನೆ"

ಆಪ್ತಶಿಷ್ಯರಿಗೆ ಸೂಕ್ತ ಸಂಭಾವನೆ

28"ನನ್ನ ಶೋಧನೆ-ವೇದನೆಗಳಲ್ಲಿ ನನ್ನನ್ನು ಬಿಟ್ಟಗಲದೆ ಇದ್ದವರು ನೀವು. 29ನನ್ನ ಪಿತನು ನನಗೆ ರಾಜ್ಯಾಧಿಕಾರವನ್ನು ವಹಿಸಿರುವಂತೆ ನಾನೂ ನಿಮಗೆ ವಹಿಸುತ್ತೇನೆ. 30ನನ್ನ ಸಾಮ್ರಾಜ್ಯದಲ್ಲಿ ನನ್ನ ಸಂಗಡ ಊಟ ಮಾಡುವಿರಿ, ಪಾನ ಮಾಡುವಿರಿ, ಮಾತ್ರವಲ್ಲ ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಸಿಂಹಾಸನಗಳ ಮೇಲೆ ಆಸೀನರಾಗುವಿರಿ"                                                                                                                                                           
                                               

ಪೇತ್ರನಿಗಾಗಿ ಪ್ರಾರ್ಥನೆ
(ಮತ್ತಾಯ ೨೬:೩೧-೩೫; ಮಾರ್ಕ ೧೪:೨೭-೩೧; ಯೊವಾನ್ನ ೧೩:೩೬-೩೮)

31"ಸಿಮೋನನೇ, ಸಿಮೋನನೇ, ಕೇಳು: ಗೋದಿಯನ್ನು ತೂರುವಂತೆ ಸೈತಾನನು ನಿಮ್ಮೆಲ್ಲರನ್ನೂ ಶೋಧಿಸಲು ಅಪ್ಪಣೆ ಕೇಳಿಕೊಂಡಿದ್ದಾನೆ. 32ಆದರೆ ನಾನು, ನಿನ್ನ ವಿಶ್ವಾಸವು ಕುಂದದಂತೆ ನಿನಗಾಗಿ ಪ್ರಾರ್ಥನೆ ಮಾಡಿದ್ದೇನೆ. ನೀನು ಪರಿವರ್ತನೆ ಹೊಂದಿದ ನಂತರ ನಿನ್ನ ಸಹೋದರರನ್ನು ದೃಢಪಡಿಸು," ಎಂದರು.
33ಅದಕ್ಕೆ ಪೇತ್ರನು, "ಗುರುದೇವಾ, ನಿಮ್ಮೊಡನೆ ಸೆರೆಗೆ ಹೋಗುವುದಕ್ಕೂ ಸಾವಿಗೆ ಈಡಾಗುವುದಕ್ಕೂ ಸಿದ್ಧನಿದ್ದೇನೆ," ಎಂದನು. 34ಆಗ ಯೇಸು, "ಪೇತ್ರನೇ, ಇಂದು ಕೋಳಿ ಕೂಗುವ ಮೊದಲೇ ನನ್ನನ್ನು ಅರಿಯೆನೆಂದು ಮೂರು ಬಾರಿ ಹೇಳುವೆ, ಇದು ಖಂಡಿತ," ಎಂದರು.
                                               


ಪಾತಕರಲ್ಲಿ ಒಬ್ಬನಂತೆ ಪರಿಗಣಿತರಾದ ಯೇಸು

35ಬಳಿಕ ಯೇಸು, "ನಾನು ನಿಮ್ಮನ್ನು ಬುತ್ತಿ, ಜೋಳಿಗೆ, ಜೋಡು ಒಂದೂ ಇಲ್ಲದೆ ಕಳುಹಿಸಿದಾಗ ನಿಮಗೇನಾದರೂ ಕೊರತೆಯಾಯಿತೇ?" ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಅವರು, "ಇಲ್ಲ," ಎಂದು ಉತ್ತರಕೊಟ್ಟರು. 36"ಆದರೆ ಈಗ ಬುತ್ತಿಯಿರುವವನು ಅದನ್ನು ತೆಗೆದುಕೊಳ್ಳಲಿ; ಜೋಳಿಗೆ ಇರುವವನೂ ಹಾಗೆಯೇ ಮಾಡಲಿ ಮತ್ತು ಕತ್ತಿಯಿಲ್ಲದವನು ತನ್ನ ಹೊದಿಕೆಯನ್ನು ಮಾರಿ ಒಂದನ್ನು ಕೊಂಡುಕೊಳ್ಳಲಿ. 37ಏಕೆಂದರೆ, 'ಪಾತಕರಲ್ಲಿ ಒಬ್ಬನಂತೆ ಪರಿಗಣಿತನಾದನು,' ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯವು ನನ್ನಲ್ಲಿ ನೆರವೇರಬೇಕಾದುದು ಅಗತ್ಯ; ನನಗೆ ಸಂಬಂಧಪಟ್ಟಿದ್ದೆಲ್ಲಾ ಸಮಾಪ್ತಿಗೊಳ್ಳಲಿದೆ," ಎಂದರು. 38"ಗುರುವೇ, ಇದೋ ಇಲ್ಲಿ ಎರಡು ಕತ್ತಿಗಳಿವೆ," ಎಂದು ಶಿಷ್ಯರು ಹೇಳಲು ಯೇಸು, "ಅಷ್ಟೇ ಸಾಕು", ಎಂದರು.                                                                                                                                                                                           

ಓಲಿವ್‌ ತೋಪಿನಲ್ಲಿ ಒಳಯಾತನೆ
(ಮತ್ತಾಯ ೨೬:೩೬-೪೬; ಮಾರ್ಕ ೧೪:೩೨; ಯೊವಾನ್ನ -೪೨)

39ಯೇಸು ಅಲ್ಲಿಂದ ಹೊರಟು ವಾಡಿಕೆಯ ಪ್ರಕಾರ ಓಲಿವ್‌ ತೋಪಿನ ಗುಡ್ಡಕ್ಕೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. 40ಕ್ಲುಪ್ತಸ್ಥಳಕ್ಕೆ ಬಂದಾಗ ಯೇಸು ಅವರಿಗೆ, "ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆ ಮಾಡಿರಿ," ಎಂದು ಹೇಳಿ, 41ಒಂದು ಕಲ್ಲೆಸೆತದಷ್ಟು ದೂರಹೋಗಿ, ಮೊಣಕಾಲೂರಿ ಪ್ರಾರ್ಥನೆ ಮಾಡುತ್ತಾ, 42"ಓ ಪಿತನೇ, ನಿಮಗೆ ಇಷ್ಟವಾದರೆ ಈ ಕಷ್ಟದಕೊಡವನ್ನು ನನ್ನಿಂದ ತೊಲಗಿಸಿರಿ. ಆದರೂ ನನ್ನ ಚಿತ್ತವಲ್ಲ, ನಿಮ್ಮ ಚಿತ್ತವೇ ನೆರವೇರಲಿ," ಎಂದರು. 43ಆಗ ಸ್ವರ್ಗದಿಂದ ದೂತನೊಬ್ಬನು ಯೇಸುವಿನ ಬಳಿ ಪ್ರತ್ಯಕ್ಷನಾಗಿ ಅವರನ್ನು ಸಶಕ್ತರನ್ನಾಗಿ ಮಾಡಿದನು. 44ಕಡುಯಾತನೆಯಲ್ಲಿದ್ದ ಅವರು ಇನ್ನೂ ಶ್ರದ್ಧೆಯಿಂದ ಪ್ರಾರ್ಥಿಸಿದರು. ಅವರ ಬೆವರು ರಕ್ತದ ಹನಿಯಂತೆ ತೊಟ್ಟುತೊಟ್ಟಾಗಿ ನೆಲದ ಮೇಲೆ ಬೀಳುತ್ತಿತ್ತು.
45ಯೇಸು ಪ್ರಾರ್ಥನೆಯಿಂದ ಎದ್ದು ಶಿಷ್ಯರ ಬಳಿಗೆ ಬಂದರು. ಆದರೆ ಶಿಷ್ಯರು ದುಃಖದಿಂದ ಸೊರಗಿ ನಿದ್ರಿಸುತ್ತಿದ್ದರು. 46ಇದನ್ನು ಕಂಡು, "ನೀವು ನಿದ್ರಿಸುತ್ತೀರೇನು? ಎದ್ದು, ಪ್ರಲೋಭನೆಗೆ ಒಳಗಾಗದಂತೆ ನೀವು ಪ್ರಾರ್ಥನೆ ಮಾಡಿರಿ," ಎಂದರು.                                                                                                         

ಯೇಸುವಿನ ಬಂಧನ
(ಮತ್ತಾಯ ೨೬:೪೭-೫೬; ಮಾರ್ಕ ೧೪:೪೩-೫೦; ಯೊವಾನ್ನ ೧೮:೩-೧೧)

47ಯೇಸು ಇನ್ನೂ ಮಾತನಾಡುತ್ತಿದ್ದ ಹಾಗೆ ಜನರ ಗುಂಪೊಂದು ಕಾಣಿಸಿಕೊಂಡಿತು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನು ಅವರಿಗೆ ಮುಂದಾಳಾಗಿ ಬಂದಿದ್ದನು. ಅವನು ಯೇಸುವಿಗೆ ಮುದ್ದಿಡಲು ಹತ್ತಿರ ಬಂದಾಗ 48ಯೇಸು, "ಯೂದಾ, ಮುದ್ದಿಟ್ಟು ನರಪುತ್ರನನ್ನು ತೋರಿಸಿಕೊಡುವೆಯಾ?" ಎಂದರು. 49ಸುತ್ತಲಿದ್ದ ಶಿಷ್ಯರು ಮುಂದೇನಾಗುವುದೆಂದು ಅರಿತುಕೊಂಡು, "ಗುರುವೇ, ಕತ್ತಿಯಿಂದ ಕಡಿಯೋಣವೇ," ಎಂದರು. 50 ಅಷ್ಟರಲ್ಲೇ ಅವರಲ್ಲಿ ಒಬ್ಬನು ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿಬಿಟ್ಟನು. 51ಆಗ ಯೇಸು, "ಸಾಕು ನಿಲ್ಲಿಸಿ," ಎಂದು ಹೇಳಿ ಅವನ ಕಿವಿಯನ್ನು ಮುಟ್ಟಿ ಗುಣಪಡಿಸಿದರು.
52ಅನಂತರ ಯೇಸು ತಮ್ಮನ್ನು ಹಿಡಿಯುವುದಕ್ಕೆ ಬಂದಿದ್ದ ಮುಖ್ಯಯಾಜಕರನ್ನೂ ದೇವಾಲಯದ ಪಹರೆಯ ದಳಪತಿಗಳನ್ನೂ ಪ್ರಮುಖರನ್ನೂ ನೋಡಿ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಖಡ್ಗಗಳನ್ನೂ ಮತ್ತು ಲಾಠಿಗಳನ್ನೂ ತೆಗೆದುಕೊಂಡು ಬಂದಿರುವಿರಾ? 53ನಾನು ಪ್ರತಿದಿನವೂ ಮಹಾ ದೇವಾಲಯದಲ್ಲಿ ನಿಮ್ಮ ನಡುವೆಯೇ ಇದ್ದೆ. ಆಗ ನೀವು ನನ್ನ ಮೇಲೆ ಕೈಮಾಡಲಿಲ್ಲ; ಆದರೆ ಇದು ನಿಮ್ಮ ಕಾಲ; ಅಂಧಕಾರವು ದೊರೆತನ ಮಾಡುವ ಕರಾಳಕಾಲ," ಎಂದರು.
                                                                                               
ಅವನಾರೋ ನಾನರಿಯೆ
(ಮತ್ತಾಯ ೨೬:೫೭-೫೮; ಮಾರ್ಕ ೧೪:೫೩-೫೪; ಯೊವಾನ್ನ  ೧೮:೧೨-೧೮; ೨೫-೨೭)

54ಅನಂತರ ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಭವನಕ್ಕೆ ಕರೆದುಕೊಂಡು ಹೋದರು. ದೂರದಿಂದ ಪೇತ್ರನು ಹಿಂಬಾಲಿಸಿ ಹೋದನು. 55ಭವನದ ಹೊರಾಂಗಣದ ನಡುವೆ ಬೆಂಕಿಹಾಕಿ ಅದರ ಸುತ್ತಲೂ ಅವರೆಲ್ಲರೂ ಕುಳಿತುಕೊಂಡಾಗ, ಪೇತ್ರನು ಅವರ ಸಂಗಡ ಸೇರಿ ಕುಳಿತುಕೊಂಡನು. 56ಬೆಂಕಿಯ ಬೆಳಕಿನಲ್ಲಿ ಕುಳಿತಿದ್ದ ಆತನನ್ನು ದಾಸಿಯೊಬ್ಬಳು ದೃಷ್ಟಿಸಿ ನೋಡಿ, "ಇವನು ಕೂಡ ಯೇಸುವಿನ ಸಂಗಡ ಇದ್ದವನು," ಎಂದಳು. 57ಅದಕ್ಕೆ ಆತನು, "ಅವನಾರೋ ನಾನರಿಯೆನಮ್ಮಾ," ಎಂದು ನಿರಾಕರಿಸಿದನು. 58ಸ್ವಲ್ಪ ಹೊತ್ತಾದ ಮೇಲೆ ಇನ್ನೊಬ್ಬನು ಆತನನ್ನು ಕಂಡು, "ನೀನು ಕೂಡ ಯೇಸುವಿನ ಸಂಗಡ ಅವನು ಇದ್ದವನಲ್ಲವೇ?" ಎನ್ನಲು ಪೇತ್ರನು, "ಇಲ್ಲಪ್ಪಾ, ನಾನಲ್ಲ," ಎಂದು ಬಿಟ್ಟನು. 59ಸುಮಾರು ಒಂದು ಘಂಟೆ ಕಾಲ ಕಳೆದ ಮೇಲೆ ಮತ್ತೊಬ್ಬನು, "ಖಂಡಿತವಾಗಿ ಇವನು ಕೂಡ ಯೇಸುವಿನ ಸಂಗಡ ಇದ್ದವನು. ಏಕೆಂದರೆ, ಇವನೂ ಗಲಿಲೇಯದವನೇ," ಎಂದು ಒತ್ತಿ ಹೇಳಿದನು. 60ಅದಕ್ಕೆ ಪೇತ್ರನು, "ನೀನು ಏನು ಹೇಳುತ್ತಿರುವೆಯೋ ನನಗೆ ತಿಳಿಯದು," ಎಂದನು. ಆ ಕ್ಷಣವೇ, ಅವನಿನ್ನೂ ಮಾತನಾಡುತ್ತಿರುವ ಸಮಯದಲ್ಲೇ ಕೋಳಿ ಕೂಗಿತು. 61ಆಗ ಪ್ರಭು ಯೇಸು ಹಿಂತಿರುಗಿ ಪೇತ್ರನನ್ನು ದಿಟ್ಟಿಸಿ ನೋಡಿದರು. "ಈ ದಿನ ಕೋಳಿ ಕೂಗುವ ಮೊದಲೇ, 'ನಾನು ಆತನನ್ನು ಅರಿಯೆನು,' ಎಂದು ಮೂರು ಬಾರಿ ನಿರಾಕರಿಸುವೆ," ಎಂದು ಯೇಸು ನುಡಿದಿದ್ದ ಮಾತುಗಳು ಪೇತ್ರನ ನೆನಪಿಗೆ ಬಂದವು. 62ಅವನು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
                                                                                                                                                                                               
ಪೆಟ್ಟು ಪರಹಾಸ್ಯ
(ಮತ್ತಾಯ ೨೬:೬೭-೬೮; ಮಾರ್ಕ ೧೪:೬೫)

63ಯೇಸುವನ್ನು ಬಂಧಿಸಿ ಹಿಡಿದುಕೊಂಡವರು ಅವರನ್ನು ಅಣಕಿಸಿ, ಹೊಡೆದರು. 64ಕಣ್ಣಿಗೆ ಬಟ್ಟೆಕಟ್ಟಿ, ನಿನ್ನನ್ನು ಹೊಡೆದವರಾರು? ಪ್ರವಾದಿಸು," ಎಂದು ಕೇಳುತ್ತಿದ್ದರು. 65ಹಲವಾರು ವಿಧದಲ್ಲಿ ಅವರನ್ನು ದೂಷಿಸಿ ನಿಂದಿಸುತ್ತಿದ್ದರು.

ಧಾರ್ಮಿಕ ನ್ಯಾಯಪೀಠದಿಂದ ವಿಚಾರಣೆ
(ಮತ್ತಾಯ ೨೬:೫೯-೬೬; ಮಾರ್ಕ ೧೪:೫೫-೬೪; ಯೊವಾನ್ನ ೧೮:೧೯-೨೪)


66ಅಷ್ಟರಲ್ಲಿ ಬೆಳಗಾಯಿತು. ಪ್ರಜಾಪ್ರಮುಖರೂ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸಭೆ ಸೇರಿದರು. ಯೇಸುವನ್ನು ತಂದು ನ್ಯಾಯಸಭೆಯ ಮುಂದೆ ನಿಲ್ಲಿಸಿದರು. 67"ನೀನು ಅಭಿಷಿಕ್ತನಾದ ಲೋಕೋದ್ಧಾರಕನಾಗಿದ್ದರೆ ನಮಗೆ ಹೇಳು," ಎಂದು ವಿಚಾರಿಸಿದರು. ಆಗ ಯೇಸು, "ನಾನು ಹೇಳಿದರೆ ನೀವು ನನ್ನನ್ನು ನಂಬುವುದಿಲ್ಲ. 68ನಾನು ಪ್ರಶ್ನೆ ಹಾಕಿದರೆ ನೀವು ನನಗೆ ಉತ್ತರ ಕೊಡುವುದೂ ಇಲ್ಲ. 69ಇನ್ನು ಮುಂದೆ ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವನು," ಎಂದರು. 70ಅದಕ್ಕೆ ಅವರೆಲ್ಲರೂ, "ಹಾಗಾದರೆ ನೀನು ದೇವರಪುತ್ರನೋ?" ಎಂದು ಕೇಳಿದರು. "ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ," ಎಂದು ಯೇಸು ಉತ್ತರಕೊಡಲು ಅವರು, 71"ಇನ್ನೇನು ಸಾಕ್ಷಿಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ," ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ