ಅಧ್ಯಾಯ 20



ಯೇಸುವಿನ ಅಧಿಕಾರ ದೈವದತ್ತವೆ?
(ಮತ್ತಾಯ ೨೧:೨೩-೨೭; ಮಾರ್ಕ ೧೧:೨೭-೩೩)

1ಒಂದು ದಿನ ಯೇಸು ಮಹಾದೇವಾಲಯದಲ್ಲಿ ಜನರಿಗೆ ಬೋಧನೆ ಮಾಡುತ್ತಾ ಶುಭಸಂದೇಶವನ್ನು ಪ್ರಕಟಿಸುತ್ತಾ ಇದ್ದರು. ಆಗ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಪ್ರಮುಖರು ಅಲ್ಲಿಗೆ ಬಂದು, 2"ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?  ನಮಗೆ ತಿಳಿಸು," ಎಂದು ಕೇಳಿದರು. 3ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ನಾನೂ ನಿಮಗೊಂದು ಪ್ರಶ್ನೆ ಹಾಕುತ್ತೇನೆ; 4”ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂತು? ದೇವರಿಂದಲೋ, ಮನುಷ್ಯರಿಂದಲೋ? ನನಗೆ ತಿಳಿಸಿರಿ," ಎಂದರು. 5ಇದನ್ನು ಕೇಳಿದ ಅವರೆಲ್ಲರೂ ತಮ್ಮತಮ್ಮೊಳಗೆ ಸಮಾಲೋಚಿಸುತ್ತಾ ಸಂವಾದಿಸುತ್ತಾ, ' ದೇವರಿಂದ ಬಂತು' ಎಂದು ಹೇಳಿದರೆ, 'ನೀವೇಕೆ ಆತನನ್ನು ನಂಬಲಿಲ್ಲ?' ಎಂದು ಕೇಳುವನು, 6'ಮನುಷ್ಯರಿಂದ ಬಂತು' ಎಂದು ಹೇಳಿದರೆ ಯೊವಾನ್ನನು ಪ್ರವಾದಿಯೆಂದು ಜನರೆಲ್ಲರೂ ತಿಳಿದಿರುವ ಕಾರಣ ಅವರೆಲ್ಲರೂ ತಮ್ಮನ್ನು ಕಲ್ಲೆಸೆದು ಕೊಲ್ಲುವರು ಎಂದುಕೊಂಡರು. 7ಅನಂತರ ಬಂದು, ಅದು ಎಲ್ಲಿಂದ ಬಂತೋ ನಮಗೆ ತಿಳಿಯದು," ಎಂದು ಉತ್ತರ ಕೊಟ್ಟರು. 8ಅದಕ್ಕೆ ಯೇಸು, "ಹಾಗಾದರೆ ನಾನೂ ಕೂಡ ಯಾವ ಅಧಿಕಾರದಿಂದ ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ," ಎಂದರು.

ಮುದ್ದುಮಗನನ್ನು ಮುಗಿಸಿದ ಗೇಣಿದಾರರು
(ಮತ್ತಾಯ ೨೧:೩೩-೪೬; ಮಾರ್ಕ ೧೨:೧-೧೨)

9ಬಳಿಕ ಯೇಸು ಜನರಿಗೆ ಈ ಸಾಮತಿಯನ್ನು ಹೇಳತೊಡಗಿದರು: "ಒಬ್ಬಾತ ಒಂದು ದ್ರಾಕ್ಷಿ ತೋಟ ಮಾಡಿಸಿದ. ಕಾರಣಾಂತರ ಅದನ್ನು ಗೇಣಿದಾರರಿಗೆ ವಹಿಸಿ, ದೀರ್ಘಕಾಲ ಹೊರನಾಡಿಗೆ ಪ್ರವಾಸ ಹೋದ. 10ಫಲದ ಕಾಲ ಬಂದಾಗ ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದ. ಗೇಣಿದಾರರು ಅವನನ್ನು ಹೊಡೆದು ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು. 11ತೋಟದ ಯಜಮಾನ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವನನ್ನೂ ಹೊಡೆದು, ಬಡಿದು ಅವಮಾನಗೈದು ಬರಿಗೈಯಲ್ಲೇ ಕಳುಹಿಸಿಬಿಟ್ಟರು. 12ಯಜಮಾನ ಮೂರನೆಯವನನ್ನು ಕಳುಹಿಸಿದ. ಇವನನ್ನೂ ಚೆನ್ನಾಗಿ ಥಳಿಸಿ ಗಾಯಗೊಳಿಸಿ, ಹೊರಕ್ಕೆ ತಳ್ಳಿದರು. 13ಕಡೆಗೆ ತೋಟದ ಯಜಮಾನನು, 'ಏನು ಮಾಡಲಿ? ನನ್ನ ಮುದ್ದುಮಗನನ್ನೇ ಕಳುಹಿಸುತ್ತೇನೆ; ಬಹುಶಃ ಅವನಿಗಾದರೂ ಮರ್ಯಾದೆ ಕೊಡಬಹುದೇನೊ,' ಎಂದುಕೊಂಡ. 14ಆದರೆ ಗೇಣಿದಾರರು ಯಜಮಾನನ ಮಗನನ್ನು ಕಂಡದ್ದೇ ತಡ, 'ತೋಟಕ್ಕೆ ಇವನೇ ಉತ್ತರಾಧಿಕಾರಿ. ಇವನನ್ನು ಮುಗಿಸಿಬಿಡೋಣ; ಆಸ್ತಿ ನಮ್ಮದಾಗುವುದು,' ಎಂದು ಒಳಸಂಚು ಮಾಡಿಕೊಂಡರು. 15ಅಂತೆಯೇ ಅವನನ್ನು ತೋಟದಿಂದ ಹೊರಕ್ಕೆ ತಳ್ಳಿ ಕೊಂದುಹಾಕಿದರು."
16"ಹೀಗಿರುವಲ್ಲಿ, ತೋಟದ ಯಜಮಾನ ಇವರಿಗೇನು ಮಾಡಬಹುದು?" ಎಂದು ಕೇಳಿದ ಯೇಸು, ತಾವೇ ಉತ್ತರಿಸುತ್ತಾ, "ಅವನು ಬಂದು ಆ ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುತ್ತಾನೆ," ಎಂದು ಹೇಳಿದರು. 17ಇದನ್ನು ಜನರು ಕೇಳಿದ್ದೇ, "ಅಯ್ಯೋ, ಹಾಗೆ ಎಂದಿಗೂ ಸಂಭವಿಸದಿರಲಿ!" ಎಂದರು. ಯೇಸು ಅವರನ್ನು ದಿಟ್ಟಿಸಿ ನೋಡಿ, "ಹಾಗಾದರೆ; 'ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು,' ಎಂದು ಪವಿತ್ರಗ್ರಂಥದಲ್ಲಿ ಹೇಳಿರುವುದರ ಅರ್ಥವಾದರೂ ಏನು? 18ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನೂ ಛಿದ್ರಛದ್ರವಾಗುವನು. ಯಾರ ಮೇಲೆ ಈ ಕಲ್ಲು ಬೀಳುವುದೋ ಅವನು ಜಜ್ಜಿಹೋಗುವನು," ಎಂದರು.

ದೇಶಭಕ್ತಿ ಧರ್ಮಸಮ್ಮತವೇ?
(ಮತ್ತಾಯ ೨೨:೧೫-೨೨; ಮಾರ್ಕ ೧೨:೧೩-೧೭)

19ತಮ್ಮನ್ನು ಕುರಿತೇ ಈ ಸಾಮತಿಯನ್ನು ಹೇಳಿದ್ದಾರೆಂದು ಅರಿತುಕೊಂಡ ಧರ್ಮಶಾಸ್ತ್ರಿಗಳು ಮತ್ತು ಮುಖ್ಯಯಾಜಕರು ಅಲ್ಲೇ ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟರು. 20ಆದುದರಿಂದ ಸೂಕ್ತ ಸಂದರ್ಭ ಹುಡುಕತೊಡಗಿದರು. ಯೇಸುವನ್ನು ರಾಜ್ಯಪಾಲನ ವಶಕ್ಕೂ ನ್ಯಾಯಾಧಿಕಾರಕ್ಕೂ ಒಪ್ಪಿಸುವ ಉದ್ದೇಶದಿಂದ ಗೂಢಚಾರರನ್ನು ಕಳುಹಿಸಿದರು. ಇವರು ನಿಷ್ಕಪಟಿಗಳಂತೆ ನಟಿಸುತ್ತಾ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಿದರು. 21"ಬೋಧಕರೇ, ನೀವು ಹೇಳುವುದು ಹಾಗೂ ಬೋಧಿಸುವುದು ನ್ಯಾಯಬದ್ಧವಾಗಿಯೇ ಇದೆ. ಮುಖದಾಕ್ಷಿಣ್ಯವಿಲ್ಲದೆ ಸತ್ಯಕ್ಕನುಸಾರವಾಗಿ ದೈವಮಾರ್ಗವನ್ನು ಬೋಧಿಸುತ್ತೀರಿ. ಇದನ್ನು ನಾವು ಚೆನ್ನಾಗಿ ಬಲ್ಲೆವು. 22ಹೀಗಿರುವಲ್ಲಿ, ನಾವು ರೋಮ್‌ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಅಲ್ಲವೋ ತಿಳಿಸಿ," ಎಂದು ಕೇಳಿದರು. 23ಅವರ ಕುಯುಕ್ತಿಯನ್ನು ಅರಿತುಕೊಂಡ ಯೇಸು, 24"ಒಂದು ನಾಣ್ಯವನ್ನು ತೋರಿಸಿರಿ. ಅದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?" ಎಂದು ಕೇಳಿದರು. ಅದಕ್ಕೆ ಅವರು, "ರೋಮ್‌ ಚಕ್ರವರ್ತಿಯವು," ಎಂದರು. ಆಗ ಯೇಸು, 25"ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ," ಎಂದರು. 26ಯೇಸು ಕೊಟ್ಟ ಈ ಉತ್ತರಕ್ಕೆ ಬೆರಗಾಗಿ ಆ ಗೂಢಚಾರರು ಬಾಯಿ ಮುಚ್ಚಿಕೊಂಡರು. ಜನರ ಮುಂದೆ, ಯೇಸುವಿನ ಮಾತುಗಳಲ್ಲಿ ತಪ್ಪು ಕಂಡು ಹಿಡಿಯಲು ಅವರಿಂದ ಸಾಧ್ಯವಾಗಲಿಲ್ಲ.

ಸತ್ತ ಬಳಿಕ ಪುನರುತ್ಥಾನ ಉಂಟೆ?
(ಮತ್ತಾಯ ೨೨:೨೩-೩೩; ಮಾರ್ಕ ೧೨:೧೮-೨೭)

27ಅನಂತರ ಸತ್ತಮೇಲೆ ಪುನರುತ್ಥಾನವಿಲ್ಲವೆಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಈ ಪ್ರಶ್ನೆಯನ್ನು ಹಾಕಿದರು: 28“ಬೋಧಕರೇ, 'ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,' ಎಂದು ಮೋಶೆಯು ನಮಗಾಗಿ ಬರೆದಿಟ್ಟಿದ್ದಾನಲ್ಲವೆ? 29ಒಮ್ಮೆ ಏಳು ಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. 30-31ಅವನ ಹೆಂಡತಿಯನ್ನು ಎರಡನೆಯವನು ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೊಬ್ಬರು ಮದುವೆಯಾಗಿ ಸಂತಾನವಿಲ್ಲದೆಯೇ ನಿಧನರಾದರು. 32ಕಟ್ಟಕಡೆಗೆ ಆ ಮಹಿಳೆಯೂ ಮರಣಹೊಂದಿದಳು. 33ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದು ಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದರಲ್ಲವೆ?" ಎಂದರು.
34ಅದಕ್ಕೆ ಯೇಸು, "ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. 35ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. 36ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರೆಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲವಾಗಿರುವ ಅವರು ದೇವರ ಮಕ್ಕಳಾಗಿರುವರು. 37ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ 'ಉರಿಯುವ ಪೊದೆ'ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ' ಎಂದು ಹೇಳಲಾಗಿದೆ.
38ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು. 39ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, "ಬೋಧಕರೇ, ಚೆನ್ನಾಗಿ ಹೇಳಿದಿರಿ," ಎಂದರು. 40ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರು ಹಿಂಜರಿದರು.


ಕ್ರಿಸ್ತ ದಾವೀದನ ಪುತ್ರನೋ? ಪ್ರಭುವೋ?
 (ಮತ್ತಾಯ ೨೨:೪೧-೪೬; ಮಾರ್ಕ ೧೨:೩೫-೩೭)



41 ಬಳಿಕ ಯೇಸು, "ಅಭಿಷಿಕ್ತನಾದ ಲೋಕೋದ್ಧಾರಕನನ್ನು 'ದಾವೀದನ ಪುತ್ರ' ಎಂದು ಕರೆಯುತ್ತಾರಲ್ಲಾ, ಅದು ಹೇಗಾಗುತ್ತೆ? ಕೀರ್ತನಾ ಗ್ರಂಥದಲ್ಲಿ ಸ್ವತಃ ದಾವೀದನೇ ಹೀಗೆ ಹೇಳಿದ್ದಾನೆ:
42-43 "ನಿನ್ನ ಶತ್ರುಗಳ ನಾನಿನ್ನ
ಪಾದಪೀಠವ ಮಾಡುವ ತನಕ
ಎನ್ನ ಬಲಗಡೆ ಆಸೀನನಾಗಿರೆಂದು
ಹೇಳಿಹನೆನ್ನ ಪ್ರಭುವಿಗೆ ಸರ್ವೇಶ್ವರ,"
44ಹೀಗೆ ದಾವೀದನೇ ಆತನನ್ನು, 'ನನ್ನ ಪ್ರಭು', ಎಂದು ಕರೆದಿರುವಾಗ ಆತನು ದಾವೀದನ ಪುತ್ರನಾಗುವುದು ಹೇಗೆ?" ಎಂದು ಪ್ರಶ್ನಿಸಿದರು.

ಕಪಟ ಭಕ್ತಾದಿಗಳ ಬಗ್ಗೆ ಎಚ್ಚರಿಕೆ
 (ಮತ್ತಾಯ ೨೩:೧-೩೬; ಮಾರ್ಕ ೧೨:೩೮-೪೦)

45ಜನರೆಲ್ಲರೂ ಕಿವಿಗೊಟ್ಟು ಕೇಳುತ್ತಿದ್ದಂತೆ ಯೇಸು ತಮ್ಮ ಶಿಷ್ಯರನ್ನು ನೋಡಿ, "ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆಯಿಂದಿರಿ; ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆಬೀದಿಗಳಲ್ಲಿ ತಮಗೆ ವಂದನೋಪಚಾರ ಸಲ್ಲಬೇಕೆಂದು ಆಶಿಸುತ್ತಾರೆ; 46ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನು ಔತಣಕೂಟಗಳಲ್ಲಿ ಶ್ರೇಷ್ಟ ಸ್ಥಾನಮಾನಗಳನ್ನೂ ಅಪೇಕ್ಷಿಸುತ್ತಾರೆ. 47ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಜನ ನಟನೆಗಾಗಿ ಜಪತಪಗಳನ್ನು ದೀರ್ಘವಾಗಿ ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು," ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ