ಅಧ್ಯಾಯ 2


ಕ್ರಿಸ್ತೇಸುವಿನ ಜನನ

1ಆ ಕಾಲದಲ್ಲಿ ಚಕ್ರವರ್ತಿ ಅಗಸ್ತುಸನು ತನ್ನ ಸಾಮ್ರಾಜ್ಯದಲ್ಲೆಲ್ಲಾ ಜನಗಣತಿಯಾಗಬೇಕೆಂದು ಆಜ್ಞೆ ಹೊರಡಿಸಿದನು. 2ಮೊಟ್ಟಮೊದಲ ಆ ಜನಗಣತಿ, ಕುರೇನ್ಯನು ಸಿರಿಯಾ ನಾಡಿಗೆ ಅಧಿಪತಿಯಾಗಿದ್ದಾಗ ನಡೆಯಿತು. 3ಆಗ ಎಲ್ಲರೂ ಜನಗಣತಿಗಾಗಿ ತಮ್ಮ ಹೆಸರುಗಳನ್ನು ದಾಖಲೆ ಮಾಡಿಸಲು ತಮ್ಮ ತಮ್ಮ ಊರುಗಳಿಗೆ ಹೊರಟರು.
4ಜೋಸೇಫನು ದಾವೀದನ ಮನೆತನ ಹಾಗೂ ಗೋತ್ರದ ಜುದೇಯ ನಾಡಿನ ಬೆತ್ಲೆಹೆಮ್‌ ಎಂಬ ದಾವೀದನ ಊರಿಗೆ ಹೋದನು. 

5ಆತನ ಸಂಗಡ ಆತನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ಪೂರ್ಣ ಗರ್ಭಿಣಿಯಾಗಿದ್ದ ಮರಿಯಳು ಸಹ ಹೋದಳು. 6ಹೀಗೆ ಅವರು ಬೆತ್ಲೆಹೆಮ್‌ನಲ್ಲಿದ್ದಾಗ, ಮರಿಯಳಿಗೆ ಪ್ರಸವ ಕಾಲ ಸಮೀಪಿಸಿತು. 7ಆಕೆಯು ಚೊಚ್ಚಲು ಮಗುವಿಗೆ ಜನ್ಮವಿತ್ತಳು. ಇದ್ದ ಬಟ್ಟೆಯಲ್ಲೇ ಸುತ್ತಿ ಆ ಮಗುವನ್ನು ಗೋದಲಿಯಲ್ಲಿ ಮಲಗಿಸಿದಳು-ಕಾರಣ ಅವರಿಗೆ ಛತ್ರದಲ್ಲಿ ಸ್ಥಳ ಸಿಕ್ಕಿರಲಿಲ್ಲ.


ದೇವದೂತರು ಕುರುಬರಿಗೆ ತಂದ ಸಂದೇಶ

8ಅದೇ ನಾಡಿನಲ್ಲಿ ಕುರುಬರು ಹೊಲಗಳಲ್ಲಿದ್ದುಕೊಂಡು ರಾತ್ರಿಯಲ್ಲಿ ಕುರಿಮಂದೆಯನ್ನು ಕಾಯುತ್ತಿದ್ದರು. 9ಇದ್ದಕ್ಕಿದ್ದಂತೆ ದೇವದೂತರು ಅವರೆದುರಿಗೆ ಪ್ರತ್ಯಕ್ಷರಾಗಲು ಸರ್ವೇಶ್ವರನ ಪ್ರಭೆಯು ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು. 10ಆ ದೂತನು ಅವರಿಗೆ, “ಹೆದರಬೇಡಿರಿ; ಇದೋ ಜನರಿಗೆಲ್ಲಾ ಪರಮಾನಂದವನ್ನುಂಟು ಮಾಡುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. 11ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಜಗದೋದ್ಧಾರಕ ಜನಿಸಿದ್ದಾನೆ. ಅವರೇ ಪ್ರಭು ಕ್ರಿಸ್ತ. 12ಇದೋ, ನಿಮಗೊಂದು ಸೂಚನೆ; ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯಲ್ಲಿ ಮಲಗಿಸಿರುವುದನ್ನು ನೀವು ಕಾಣುವಿರಿ,” ಎಂದನು.
13ತಕ್ಷಣವೇ ಆ ದೂತನ ಸಂಗಡ ಸ್ವರ್ಗಲೋಕದ ದೂತಪರಿವಾರವು ಕಾಣಿಸಿಕೊಂಡಿತು. 14ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ,” ಎಂದು ಸರ್ವೇಶ್ವರನ ಸ್ತುತಿ ಮಾಡಿತು,
15ದೇವದೂತರು ಸ್ವರ್ಗಕ್ಕೆ ಹಿಂದಿರುಗಿದ ಮೇಲೆ ಕುರುಬರು, “ಬನ್ನಿ, ಸರ್ವೇಶ್ವರ ನಮಗೆ ತಿಳಿಸಿದ ಘಟನೆಯನ್ನು ತಿಳಿಯಲು ಈಗಲೇ ಬೆತ್ಲೆಹೆಮ್‌ಗೆ ಹೋಗೋಣ. ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. 16ಅವರು ಅಲ್ಲಿಂದ ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು. 17ಕಂಡಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲಾ ಅವರಿಗೆ ತಿಳಿಸಿದರು. 18ಕುರುಬರು ಹೇಳಿದ ವಿಷಯಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. 19ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಿದ್ದಳು. 20ಇತ್ತ ಕುರುಬರು ತಾವು ಕಂಡಿದ್ದನ್ನೂ ಕೇಳಿದ್ದನ್ನೂ ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ, ಮಹಿಮೆಪಡಿಸುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತ್ತು.

ಯೇಸುವಿನ ನಾಮಕರಣ

21ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ ‘ಯೇಸು’ ಎಂಬ ಹೆಸರನ್ನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.

ಯೇಸುಬಾಲರ ಸಮರ್ಪಣೆ

22ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು. 23ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವೂ ದೇವರಿಗೆ ಮೀಸಲು’ ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. 24ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವ ಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.
25ಆಗ ಜೆರುಸಲೇಮಿನಲ್ಲಿ ಸಿಮಯೋನನೆಂಬ ಓರ್ವನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್‌ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಿದ್ದನು. ಪವಿತ್ರಾತ್ಮರು ಇವನಲ್ಲಿ ನೆಲೆಸಿದ್ದರು. 26ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ* ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದ ಆಶ್ವಾಸನೆಯನ್ನು ಪಡೆದಿದ್ದನು. 27ಆ ಪವಿತ್ರಾತ್ಮರಿಂದಲೇ ಪ್ರೇರಿತನಾಗಿ ಅವನು ಮಹಾ ದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಯೇಸುಬಾಲರನ್ನು ದೇವಾಲಯಕ್ಕೆ ತಂದಾಗ, 28ಸಿಮಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು;
29 “ಸರ್ವೇಶ್ವರಾ, ನೆರವೇರಿತಿಂದು ನಿನ್ನ ಮಾತು,
ತೆರಳಬಿಡು ನಿನ್ನ ದಾಸನನು ಶಾಂತಿಯಿಂದ.
30ಕಣ್ಣಾರೆ ನಾಕಂಡೆ ನೀನಿತ್ತ ಉದ್ಧಾರಕನನು.
31ಸಾಕ್ಷಾತ್ಕರಿಸಿದೆ ಎಲ್ಲರ ಸಮ್ಮುಖದಲ್ಲಿ ನೀನವನನು.
32ಅನ್ಯಜನರನು ಬೆಳಗಿಸುವ ಜ್ಯೋತಿ ಈತ
ನಿನ್ನ ಜನ ಇಸ್ರಯೇಲರಿಗೆ ಕೀರ್ತಿದಾತ.”
33ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆ ತಾಯಿಗಳು ಆಶ್ಚರ್ಯಪಟ್ಟರು. 34ಅವರನ್ನು ಸಿಮಯೋನನು ಆಶೀರ್ವದಿಸಿ, ತಾಯಿ ಮರಿಯಳಿಗೆ, “ಇದೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತ ಆಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು, 35 **[ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲುಗೊಂದು ನಿನ್ನ ಅಂತರಂಗವನ್ನು ಸೀಳುವುದು],” ಎಂದು ಹೇಳಿದನು.
36ಇದಲ್ಲದೆ ಅಶೇರನ ವಂಶಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿ ಇದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಂದಿಗೆ ಬಾಳಿ ವಿಧವೆಯಾದವಳು. 37ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು.*** ಮಹಾದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು. 38ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು.

ಮರಳಿ ನಜರೇತಿಗೆ

39ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲಾ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್‌ ಮತ್ತು ಮರಿಯಳು ಗಲಿಲೇಯ ಪ್ರಾಂತದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂತಿರುಗಿದರು. 40ಬಾಲ ಯೇಸು ಬೆಳೆದಂತೆ ಶಕ್ತರೂ, ಜ್ಞಾನ ಸಂಪನ್ನರೂ ಆದರು. ಇದಲ್ಲದೆ ದೈವಾನುಗ್ರಹವು ಅವರ ಮೇಲಿತ್ತು.

ಯೇಸುವಿನ ಹನ್ನೆರಡನೇ ವರ್ಷದಲ್ಲಿ...
               
41ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು. 42ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು. 43ಹಬ್ಬ ಮುಗಿಸಿಕೊಂಡು ಅವರು ಹಿಂತಿರುಗಿ ಬರುವಾಗ ಬಾಲಕ ಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು. 44ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದು ಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು. 45ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು. 46ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆ ಹಾಕುತ್ತಾ ಇದ್ದರು. 47ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದವರೆಲ್ಲರೂ ಅವರ ಜ್ಞಾನವನ್ನು ಕಂಡು ಬೆರಗಾದರು. 48ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೇಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು. 49ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೆ?” ಎಂದರು. 50ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ.
51ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದು ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಸಂಗ್ರಹಿಸಿಟ್ಟುಕೊಂಡಳು. 52ಯೇಸು ಬೆಳೆದಂತೆ ಜ್ಞಾನದಲ್ಲಿ ಪ್ರವರ್ಧಿಸುತ್ತಾ ದೇವರಿಗೂ ಮಾನವರಿಗೂ ಅಚ್ಚುಮೆಚ್ಚಾಗುತ್ತಾ ಬಂದರು. 


*ಅಥವಾ : ಕ್ರಿಸ್ತ
**ಈ ಕಂಸದಲ್ಲಿ ಬರುವ ವಾಕ್ಯಗಳು ಕೆಲವು ಹಸ್ತಪ್ರತಿಗಳಲ್ಲಿ ಇಲ್ಲ.
***ಅಥವಾ : ಅವಳು 84 ವರ್ಷಕಾಲ ವಿಧವೆಯಾಗಿದ್ದಳು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ